ಒಂದು ವರುಷ ಕಳೆದಿದೆ.ದಿನಗಳು,ತಿಂಗಳುಗಳು ಗತಿಸಿ ಕ್ಯಾಲೆಂಡರ್ ಬದಲಾಗುವುದೇ ಕಾಲ ಪರ್ವರ್ತನೆಯಲ್ಲ.ಈ ಒಂದು ವರುಷದ ಒಡಲೊಳಗೆ ನಮ್ಮ ಜೀವನದ ಅತಿ ದೊಡ್ದದಲ್ಲವಾದರೂ ಅತಿ ಚಿಕ್ಕದಾದರೂ ಮಹತ್ವ ಪೂರ್ಣ ಘಟ್ಟವನ್ನು ನಾವುಗಳು ದಾಟಿರುತ್ತೇವೆ.ಇದು ನಮಗೆ ಹಿಂದಿನ ದಿನಗಳ ಮೆಲುಕು ಹಾಕುವುದರ ಜೊತೆಗೆ ಮುಂದಿನ ದಿನಗಳ ತಯಾರಿಗೆ ಅನುಕೂಲವಾಗುತ್ತದೆ.ಹೊಸ ವರುಷವು ನಮ್ಮನ್ನು ಸ್ವಾಗತಿಸಿದ ಕಾತರದಲ್ಲಿದ್ದರೆ ಕಳೆದ ವರುಷದ ನಿರ್ಗಮನ ನಮ್ಮನ್ನು ಸಮೀಕ್ಷೆಗೆ ಒಳಪಡಿಸಿದೆ.
ನಿರ್ಗಮನ ಮತ್ತು ಆಹ್ವಾನಗಳ ಈ ಸಂಗಮ ಸಮಯದಲ್ಲಿ, ಹಿಂದಿನ ಅಪೂರ್ಣವಾದ ಹಾಗೂ ಭವಿಷ್ಯಕ್ಕೆ ಹೊಸ ಸಂಕಲ್ಪಗಳನ್ನು ಮನುಷ್ಯನು ಮಾಡುವ ಸನ್ನಿಹಿತ ಕ್ಷಣವಾಗಿದೆ.ಅಗಣಿತ-ಅಪರಿಮಿತ ಕನಸುಗಳನ್ನು ಮನುಷ್ಯನು ಸಂಕುಚಿತ ಮನಸ್ಸಿನಲ್ಲಿ ಅದುಮಿಟ್ಟುಕೊಂಡು,ಬದುಕು ಸಾಗಿಸಲು ಪ್ರಯತ್ನಿಸಿರುತ್ತಾನೆ.ಸಂಕಲ್ಪಗಳು-ವಿಕಲ್ಪಗಳಾಗಿ ಪರಿಣಮಿಸಿ ನಿಂತಲ್ಲೇ ಸ್ತಬ್ದನಾಗಿರುವಂತೆ ಮಾಡಿರುತ್ತವೆ.ಇಚ್ಛಾಶಕ್ತಿಯ ಕೊರತೆ,ಸಾರ್ಥಕ ಪ್ರಯತ್ನದಲ್ಲಿ ವಿಫಲತೆಯಿಂದಾಗಿ ಮುನ್ನಡೆ ಕಾಣದಂತೆ ಬದುಕುತಿರುತ್ತೇವೆ.ಭುವಿಯ ಮೇಲಿರುವ ಎಲ್ಲಾ ಸಂಕಟಗಳು ನಮ್ಮ ತಲೆಯ ಮೇಲಿರುವಂತೆ ಭಾವಿಸುತ್ತಾ ಮನ(ಣ)ಭಾರ ಅನುಭವಿಸುತ್ತೇವೆ.
ಮನುಷ್ಯನ ವಿವೇಕಯುಕ್ತನಾಗಿದ್ದರು,ಅದನ್ನು ಸರಿಯಾಗಿ ಬಳಸದೇ ಇದ್ದುದರಿಂದ ದುಃಖಿಯಾಗಿ ನರಳುತ್ತಾನೆ.ಮನುಷ್ಯನಿಗೆ ಜೀವನವನ್ನು ಬೆಳಗಿಸಿಕೊಳ್ಳಲೆಂದೇ ಮೂರು ಪ್ರಮಾಣ(ಅಳತೆ)ಗಳಿವೆ.೧.ಅನುಭೂತಿಗಾಗಿ ಹೃದಯ ೨.ಚಿಂತನೆ ಮತ್ತು ಕಲ್ಪನೆಗೆಂದು ಮೆದುಳು(ಬುದ್ದಿ)ಹಾಗೂ ೩.ಕೆಲಸ ಮಾಡಲೆಂದೇ ಕೈಗಳು.ಆದರೆ ಹೃದಯವಿದ್ದು ಪವಿತ್ರವಿಲ್ಲಾ,ಬುದ್ದಿಯಿದ್ದರೂ ಒಳ್ಳೆಯ ನಿರ್ಣಯ ತೆಗೆದುಕೊಳ್ಳುವಂತ ವಿವೇಕ ಜಾಗೃತಿಯಿಲ್ಲಾ,ಹಾಗೂ ಶಕ್ತಿಯುತ ಕೈಗಳಿದ್ದರೂ ಕ್ರಿಯಾಶೀಲವಾಗಿಲ್ಲ.ಹೀಗಿದ್ದಾಗ ಜೀವನದ ಸಾರ್ಥಕ ಪಯಣ ಅಪೂರ್ಣವಲ್ಲವೇ?
ಹೃದಯ ಪವಿತ್ರತೆಗಾಗಿ,ಸಂಕಲ್ಪ ಸಿದ್ದಿಗಾಗಿ ವಿವೇಕ ಜಾಗೃತಿಯೊಂದಿಗೆ,ಮನ,ವಚನ,ಕಾಯಗಳ ತ್ರಿಕರಣ ಶುದ್ದಿಯೊಂದಿಗೆ ಭಗವಂತನ ಪ್ರಾರ್ಥನೆ ಮಾಡಬೇಕು.ಭಗವಂತನ ಕೃಪೆಗೆ ಪಾತ್ರರಾಗಬೇಕೆಂದರೆ “ಪ್ರಾರ್ಥನೆ” ಸಹಕಾರಿಯಾಗಬಲ್ಲದು.
ಇಂದಿನ ವಿಷಮ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ನಾವುಗಳು ಮನುಷ್ಯ-ಮನುಷ್ಯರ ನಡುವೆ ಸಂಪೂರ್ಣ ಅಂತರ್ದೃಷ್ಟಿ ಮತ್ತು ಸಂವೇದನೆಯ ಜೊತೆಗೆ,ಮಾನವೀಯ ಮೂಲ್ಯಗಳ ಪುನರ್ಸ್ಥಾಪನೆ ಮತ್ತು ಧಾರ್ಮಿಕ,ರಾಜನೈತಿಕ,ಸಾಮಾಜಿಕ ಮತ್ತು ಚಾರಿತ್ರಿಕ ಕ್ರಾಂತಿಗಳ ಅವಶ್ಯಕತೆಯಿದೆ.ಮಾನಸಿಕ ಪಟಲಕ್ಕೆ ಅಂಟಿರುವ ಕುಸಂಸ್ಕಾರಗಳನ್ನು ಅಳಿಸಿ ಉತ್ತಮ ಸಮಾಜ ನಿರ್ಮಾಣವಾಗಬೇಕಿದೆ.ಮನುಷ್ಯ ತನ್ನ ಉತ್ಸಾಹ ಮತ್ತು ಸಂಕಲ್ಪಶಕ್ತಿಯ ಜೊತೆಗೆ ಮುಂದೆ ಸಾಗಿದರೆ ವರ್ತಮಾನದಲ್ಲಿ ಹತಾಶೆಗಳಿಂದ ನಿವೃತ್ತಿಯಾಗಿ ಹೊಸ ಬೆಳಕಿನ ಆಸರೆಯಲ್ಲಿ ನಡೆಯಬಹುದು.
ಹೊಸ ವರ್ಷದ ಹಾಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ಕಾಲ ಪರಿವರ್ತನೆಯ ಬರಹ ಅತೀವ ಸುಂದರವಾಗಿ ಮೂಡಿ ಬಂದಿದೆ. ಬಹುಶಃ ಈ ವರ್ಷದ ಕಾಲ ಪರಿವರ್ತನೆಯು ತಮ್ಮಲ್ಲಿ ಹೊಸ ಉತ್ಸಾಹ ಮತ್ತು ಮಹತ್ವಪೂರ್ಣ ಜವಾಬ್ದಾರಿಯನ್ನು ನೀಡಿದೆ. ಅದನ್ನು ಯಶಸ್ವಿಯಾಗಿ ತಾವು ಮುನ್ನಡೆಸುತ್ತೀರೆಂಬ ಆತ್ಮವಿಶ್ವಾಸ ನಮ್ಮಲ್ಲಿದೆ. ಹೊಸ ವರ್ಷ ಮತ್ತು ಹೊಸ ಸಂಕ್ರಮಣವು ತಮಗೆ ಉತ್ಸಾಹವನ್ನು ನೀಡುವ ಜೊತೆಗೆ ತಮ್ಮ ಸಾಮರ್ಥ್ಯವನ್ನು ಸಮಾಜವು ನೋಡಿ ಹೆಮ್ಮೆ ಪಡುವಂತಾಗಲಿ ಎಂಬ ವಿಶ್ವಾಸ ನನ್ನದು.
ನಮೋಸ್ತುಗಳೊಡನೆ